ಏಕೆನ್ನ ಈ ರಾಜ್ಯ
ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ |
ಸಾಕಲಾರದೆ ಎನ್ನ ಏಕೆ ಹುಟ್ಟಿಸಿದೆ ||ಪ||
ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ ಮನಕೆ ಜಯವಿಲ್ಲ |
ಹೊನ್ನು ಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ ಇಂದಿರೇಶನು ಬಲ್ಲ ||ಏಕೆನ್ನ||
ದೇಶ ಪರಿಚಯವಿಲ್ಲ ದೇಹದಲ್ಲಿ ಬಲವಿಲ್ಲ
ವಾಸಿ ಪಂಥಗಳೆಂಬೊ ಒಲುಮೆ ಎನಗಿಲ್ಲ |
ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||ಏಕೆನ್ನ||
ಕರೆದು ಕೊಡುವವರಿಲ್ಲ ಕರುಣೆ ತೋರುವರಿಲ್ಲ
ಕಮಲಾಕ್ಷನಲ್ಲದೆ ಎನಗೊಬ್ಬರಿಲ್ಲ |
ಕನಸಿನಲಿ ಕಳುವಿನ ಮನಸಿನಲಿ ದೃಢವಿಲ್ಲ
ವನಜಾಕ್ಷ ಪುರಂದರ ವಿಠಲ ತಾ ಬಲ್ಲ ||ಏಕೆನ್ನ||
Comments
Post a Comment