ಕೇಶವನೊಲುಮೆಯು

 

ಕೇಶವನೊಲುಮೆಯು ಆಗುವ ತನಕ

ಹರಿ ದಾಸರೊಳಿರುತಿರು ಹೇ ಮನುಜ ||ಪ||


ಕ್ಲೇಶಪಾಶಂಗಳ ಹರಿದು ವಿಲಾಸದಿ

ಶ್ರೀಶನ ನುತಿಗಳ ಪೋಗಳುತ ಮನದೊಳು ||ಅ.ಪ.||


ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ

ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ |

ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ

ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ ||ಕೇಶವ||


ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ

ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿದೋದೀತೇ |

ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ

ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ ||ಕೇಶವ||


ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ

ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ |

ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ

ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ ||ಕೇಶವ||

Comments

Popular Posts