ನೀನೆ ಅನಾಥಬಂಧು
ನೀನೆ ಅನಾಥಬಂಧು ಕಾರುಣ್ಯ ಸಿಂಧು ||ಪ||
ಮದಗಜವೆಲ್ಲ ಕೂಡಿದರೇನು
ಅದರ ಸಮಯಕ್ಕೆ ಒದಗಲಿಲ್ಲ |
ಮದನನಯ್ಯ ಮಧುಸೂಧನ ಎನ್ನಲು
ಮುದದಿಂದೊದಗಿದೆಯೊ ಕೃಷ್ಣಾ ||ನೀನೆ||
ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ |
ಗತಿನೀನೇ ಮುಕುಂದಾ ಎನ್ನಲು
ಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ ||ನೀನೆ||
ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯನಿತ್ತೆ |
ಸುಲಭದಿ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರ ವಿಠ್ಠಲರಾಯ ||ನೀನೆ||
Comments
Post a Comment