ರಂಗನಾಯಕ ರಾಜೀವ ಲೋಚನ

 

ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।|ಪ।|

ಅಂಗನೇ  ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ||ಅ ಪ||

ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು |
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ರಂಗನಾಯಕ।।

ಸನಕ ಸನಂದನ  ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು |
ಘನಶುಕ  ಶೌನಕ ವ್ಯಾಸ ವಾಲ್ಮೀಕರು 
ನೆನೆದು ನೆನೆದು ಕೊಂಡಾಡುವರು  ಹರಿಯೇ ।।ರಂಗನಾಯಕ।।

ಸುರರು ಕಿನ್ನರರು ಕಿಂಪುರುಷರು ಉರಗುರು
ಪರಿಪರಿಯಲಿ  ನಿನ್ನ ಸ್ಮರಿಸುವರು |
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು  ಭಾಸ್ಕರನು ಶ್ರೀಹರಿಯೇ ।।ರಂಗನಾಯಕ।।

ಪದುಮನಾಭನೇ  ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ |
ಉದಯದೊಳೆದ್ದು ಸವಿದಾಡುತ್ತಾ  ಪಾಡುತ್ತಾ
ದಧಿಯ ಕಡೆವರೇಳೋ  ಮಧುಸೂಧನ ಕೃಷ್ಣಾ ।।ರಂಗನಾಯಕ।।

ಮುರಮಥನನೇ  ನಿನ್ನ ಚರಣದ  ಸೇವೆಯ
ಕರುಣಿಸಬೇಕೆಂದು ತರುಣಿಯರು|
ಪರಿಪರಿಯಿಂದಲೇ  ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ  ಶ್ರೀ ಹರಿಯೇ ।।ರಂಗನಾಯಕ।। 

Comments

Popular Posts